Monday, June 24, 2013

ಅಮ್ಮ ಹೇಳಿದ ... ಪುಸ್ತಕಕ್ಕೆ ೫೦ ನೇ ಮುದ್ರಣದ ಸಂಭ್ರಮ

ನನ್ನ ಮೊದಲ ಪುಸ್ತಕ ಹೊರಬಂದದ್ದು ೨೦೦೬ ರಲ್ಲಿ . ಅವತ್ತು ಪುಸ್ತಕ ಮಾರಾಟದ ಬಗ್ಗೆ ಏನೆಂದರೆ ಏನೂ ಗೊತ್ತಿರಲಿಲ್ಲ . ಪುಸ್ತಕ ಪ್ರಕಟ ಆದ ನಂತರ, ನಾವು ಮಾರಾಟ ಮಾಡ್ತೇವೆ ಎಂದು ಬಂದ ಕೆಲವರು ಪುಸ್ತಕಗಳ ಜೊತೆಗೇ ಮಾಯವಾದರು.ಅವತ್ತಿನ ನಷ್ಟವನ್ನು ಲೆಕ್ಕ ಹಾಕಿ ಮುಂದೆ ಯಾವತ್ತೂ ಪುಸ್ತಕ ಪ್ರಕಟಿಸಬಾರದು ಅಂತ ನಿರ್ಧರಿಸಿದ್ದೆ . ೩ ವರ್ಷದ ನಂತರ " ಅಮ್ಮ ಹೇಳಿದ ಎಂಟು ಸುಳ್ಳುಗಳು " ಪುಸ್ತಕ ಪ್ರಕಟಿಸಬೇಕು ಅನ್ನಿಸಿದಾಗ ಕನ್ನಡದ ೯ ಪ್ರಕಾಶಕರ ಮುಂದೆ ಹಸ್ತಪ್ರತಿ ಹಿಡಿದುಕೊಂಡು ನಿಂತೆ. ನೀವು ನಂಬುವುದಿಲ್ಲ;ಪುಸ್ತಕ ಪ್ರಕಟಿಸಲು ಅವತ್ತು ಯಾರೂ ಮುಂದೆ ಬರಲಿಲ್ಲ!
ಇದು ಮಾರಾಟ ಆಗಲ್ಲ ಮಣಿಕಾಂತ್ ಎಂದು ತುಂಬಾ ಸ್ಪಷ್ಟವಾಗಿ ಹೇಳಿಬಿಟ್ಟರು. ಈ ಪುಸ್ತಕ ಮಾಡುವ ರಗಳೆಯೇ ಬೇಡ ಎಂದುಕೊಂಡು ನಾನು ಕೈ ಚೆಲ್ಲಿ ಕೂತಿದ್ದಾಗ ವಿಪ್ರೋದಲ್ಲಿ ಇಂಜಿನಿಯರ್ ಆಗಿದ್ದ ಹಿರಿಯ ಮಿತ್ರ ಶ್ರೀನಿವಾಸ್ ವೆಂಕಟರಾಮ್ - ೧೫ ಸಾವಿರ ರುಪಾಯಿ ಸಾಲ ಕೊಡ್ತೇನೆ . ೧೦೦ ಪ್ರತಿಗಳನ್ನು ತಗೊಳ್ತೇನೆ. ನೀವು ಬುಕ್ ಮಾಡಿ ಎಂದು ಆಸೆ ಹುಟ್ಟಿಸಿದರು.
ಹೊಸ ಕನಸು ಚಿಗುರೊಡೆದದ್ದೇ ಆಗ . ನನ್ನ ಮಗಳು ನೀಲಿ ಯ ಹೆಸರಿನ ಜೊತೆಗೆ ಅಮ್ಮ ಎಂಬುದನ್ನೂ ಪುಟ್ಟದಾಗಿ ತಿಳಿಸುವ " ಮಾ" ಎಂಬ ಅಕ್ಷರ ಇಟ್ಟುಕೊಂಡು ನೀಲಿಮಾ ಪ್ರಕಾಶನದಲ್ಲಿ ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ ಹೊರತಂದೆ .
ಆ ನಂತರ ನಡೆದಿರುವ ಪ್ರತಿಯೊಂದೂ ನನ್ನ ಪಾಲಿಗೆ ಅಚ್ಚರಿಯೇ .
ಪುಸ್ತಕ ನನ್ನ ನಿರೀಕ್ಷೆಯನ್ನು ಮೀರಿ ತುಂಬಾ ವೇಗವಾಗಿ ಮಾರಾಟ ಆಯಿತು . ಸೇಡಂ ನ ಅಮ್ಮ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಪುಸ್ತಕಕ್ಕೆ ಒಲಿದುಬಂದವು . ಹುಟ್ಟು ಹಬ್ಬದ ಖುಷಿಗೆ, ಮದುವೆಯ ಸಡಗರಕ್ಕೆ ಈ ಪುಸ್ತಕವನ್ನು ಕಾಣಿಕೆಯಾಗಿ ಕೊಡುವ ಅಭ್ಯಾಸ ಶುರುವಾಯಿತು . ಪುಸ್ತಕ ಓದಿದವರು ಮರುಗಳಿಗೆಯೇ ಅಮ್ಮನನ್ನು , ಅವಳ ಪ್ರೀತಿಯನ್ನು,ತ್ಯಾಗವನ್ನು,ಸಂಕಟವನ್ನು ನೆನಪಿಸಿಕೊಂಡು ಬಿಕ್ಕಿದರು.ಬದುಕಿರುವವರೆಗೂ ಅಮ್ಮನನ್ನು ಚೆನ್ನಾಗಿ ನೋಡ್ಕೊತೇವೆ ಎಂದು ಪ್ರಾಮಿಸ್ ಮಾಡಿದರು. ಆ ಪುಸ್ತಕ ಬರೆದಿದ್ದಕ್ಕೆ ನಿಮಗೆ ಸ್ಪೆಷಲ್ ಥ್ಯಾಂಕ್ಸ್ ಎಂದೂ ಸೇರಿಸಿದರು .
ಇದನ್ನೆಲ್ಲಾ ಯಾಕೆ ಹೇಳಿದೆ ಅಂದರೆ ,ಅಮ್ಮ ಹೇಳಿದ ... ಪುಸ್ತಕ ಇವಾಗ ೫೦ ನೇ ಮುದ್ರಣ ಕಾಣುತ್ತಿದೆ. ಒಂದು ಮುದ್ರಣ ಅಂದರೆ ಒಂದು ಸಾವಿರ ಪ್ರತಿಗಳು ಮಾತ್ರ. ೫೦೦೦೦ ಆದ ಪುಸ್ತಕದ ಮೊದಲ ಪ್ರತಿಯನ್ನು ಕೈಗೆ ಎತ್ತಿಕೊಳ್ಳುವ ಮುನ್ನ ಈ ಖುಷಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು.
ನನಗೆ ಅಕ್ಷರ ಕಲಿಸಿದ ,ಬೆಳೆಸಿದ,ಶುಭ ಹಾರೈಸಿದ ,ತಪ್ಪು ಮಾಡಿದಾಗ ತಿದ್ದಿದ,ಪುಸ್ತಕ ಖರೀದಿಸಿ ಅದನ್ನು ಎಲ್ಲ ಮನಸ್ಸುಗಳಿಗೂ ತಲುಪಿಸಿದ ಬಂಧುಗಳಿಗೆ, ಪುಸ್ತಕ ಮಾರಾಟ ಮಾಡಿದ ಎಲ್ಲ ಪುಸ್ತಕ ವ್ಯಾಪಾರಿಗಳಿಗೆ ವಂದನೆ .
ಪ್ರೀತಿಯಿಂದ
ಮಣಿಕಾಂತ್

Sunday, June 23, 2013



ಬಿಗ್ ಬಾಸ್ 2ನೇ ಆವೃತ್ತಿಗೆ ಸುದೀಪ್ ಇಲ್ಲ!



 ಕನ್ನಡ ಬಿಗ್ ಬಾಸ್ ಮೊದಲ ಆವೃತ್ತಿಯ ಯಶಸ್ಸಿನಲ್ಲಿ ನಿರೂಪಕನಾಗಿ ಜನರ ಮನ್ನಣೆಗಳಿಸಿರುವ ನಟ 'ಕಿಚ್ಚ' ಸುದೀಪ್ ಅವರ ಪಾತ್ರವನ್ನು ಯಾರೂ ಅಲ್ಲಗಳೆಯುವುದಿಲ್ಲ. ಸುದೀಪ್ ಅವರ ನಿರೂಪಣೆ ಇದ್ದಿದ್ದರಿಂದಲೇ ಬಿಗ್ ಬಾಸ್ ಈ ಪರಿಯ ಜನಪ್ರಿಯತೆ ಗಳಿಸಿದೆ ಅನ್ನುವವರೂ ಇದ್ದಾರೆ. ನಮ್ಮ ಓದುಗರಂತೂ ನಿರೂಪಕರಲ್ಲಿ ಸುದೀಪ್ ಅವರೇ ಬೆಸ್ಟ್ ಎಂದು ಕೂಡ ತೀರ್ಪು ನೀಡಿದ್ದಾರೆ. ಬಿಗ್ ಬಾಸ್ ಮತ್ತು ಸುದೀಪ್ ಬಗ್ಗೆ ಅಭಿಪ್ರಾಯ ಹೀಗಿರುವಾಗ ಸುದೀಪ್ ತಮ್ಮ ಅಭಿಮಾನಿಗಳಿಗೆ, ಬಿಗ್ ಬಾಸ್ ನಿರ್ಮಾತೃಗಳಿಗೆ ಒಂದು ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಅದೇನೆಂದರೆ, ಬಿಗ್ ಬಾಸ್ ಮುಂದಿನ ಆವೃತ್ತಿಯಲ್ಲಿ ಅವರು ನಿರೂಪಣೆ ಮಾಡುವುದಿಲ್ಲ ಎಂದು. ಈ ಆಘಾತಕಾರಿ ಸಂಗತಿಯನ್ನು ಸುದೀಪ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದು, ಇನ್ನು ಮುಂದೆ ಸಿನೆಮಾಗಳಲ್ಲಿ ಹೆಚ್ಚು ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ. ಈ ವಿಷಯ ಕೇಳಿ ಅವರ ಟ್ವಿಟ್ಟರ್ ಸ್ನೇಹಿತರು ತಮ್ಮ ಅಸಮಾಧಾನ ಮತ್ತು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ತಮ್ಮ ತೀರ್ಮಾನ ಬದಲಾಯಿಸಲು ಒಪ್ಪದ ಸುದೀಪ್, "ಸಿನೆಮಾ ಮೂಲಕವೇ ನಾನು ಸಹಸ್ರಾರು ಅಭಿಮಾನಿಗಳ ಹೃದಯ ಗೆದ್ದಿದ್ದೇನೆ. ಅದನ್ನೇ ಮುಂದುವರಿಸಲು ಇಚ್ಛಿಸುತ್ತೇನೆ. ಮುಂದಿನ ಆವೃತ್ತಿ ನಡೆಸಿಕೊಡುವವರು ಬಿಗ್ ಬಾಸ್‌ಗೆ ಇನ್ನೂ ಹೆಚ್ಚಿನ ನ್ಯಾಯ ಒದಗಿಸಿಕೊಡುತ್ತಾರೆ ಎಂಬ ನಂಬಿಕೆಯಿದೆ" ಎಂದು ಟ್ವೀಟಿಸಿದ್ದಾರೆ. [ಸುದೀಪ್ ಸ್ಥಾನ ತುಂಬುವವರು ಯಾರು?]